ಸಾಹಿತ್ಯ:-ವಿನಾಯಕ ಅರಳಸುಳಿ
ಸಂಗೀತ/ಗಾಯನ:-ರಾಘವೇಂದ್ರ ಬೀಜಾಡಿ
ಹಾಡಬಲ್ಲೆ ನಾನು ಯಾವ
ಗೊಡವೆ ಇಲ್ಲದೆ
ಹಾಡ ಹೊನ್ನಿಗಿಂತ ಚಂದ-
-ದೊಡವೆ ಎಲ್ಲಿದೆ? ||
ಯಾರೂ ಕೇಳದಿರುವ ನೋವ
ಹಾಡಿಕೊಂಡೆನು
ಯಾರೋ ಮಾಡಿಹೋದ ಗಾಯ
ನೀವಿಕೊಂಡೆನು.
ತೊರೆದು ಹೋದ ಎಲ್ಲರನ್ನು
ಕರೆವ ಸಾಲಿದೆ
ಆಡಿ ಮುಗಿದ ಪ್ರೀತಿ ಮಾತು
ಮತ್ತೆ ಕೇಳಿದೆ.||
ಅಂದು ಅಮ್ಮ ತೂಗಿ ನುಡಿದ
ಲಾಲಿ ಹಾಡದು
ಇಂದು ನನ್ನ ಕೊರಳಿನಲ್ಲಿ
ಮುಂದುವರೆದಿದೆ.
ಹಾಡುವಾಗ ಏಕೋ ಕಣ್ಣು
ತುಂಬಿ ಬಂದಿದೆ
ಹಾಡೆ ನಲ್ಲೆಯಾಗಿ ಬಂದು
ನನ್ನ ರಮಿಸಿದೆ.||
ಯಾರ ಹಾಡಿನಾಳದಲ್ಲಿ
ಯಾರ ಸ್ಮರಣೆಯೋ?
ದೊರೆತ ಸಾಲು, ಬೆರೆತ ಕೊರಳು
ಯಾರ ಕರುಣೆಯೋ?
ಹರಿದವೆನಿತೋ ಮಧುರ ಭಾವ
ಬಾಳ ನದಿಯಲಿ.
ಉಳಿದುದೊಂದೆ ನೆನಪ ರಾಗ
ಇಂದು ಎದೆಯಲಿ.||