ನೀನೊಬ್ಬನೇ ಬಾರೊ ಜೊತೆಗೆ ಕರೆತರಬೇಡ - ಸಾಹಿತ್ಯ:-ಡಾ||ಎಚ್.ಎಸ್.ವೆಂಕಟೇಶ ಮೂರ್ತಿ


ಸಾಹಿತ್ಯ:-ಡಾ||ಎಚ್.ಎಸ್.ವೆಂಕಟೇಶ ಮೂರ್ತಿ

ಸಂಗೀತ:-ಚಿದಂಬರ ಕಾಳಮಂಜಿ

ಗಾಯನ:-ನಮ್ರತಾ ಪ್ರಸಾದ್



ನೀನೊಬ್ಬನೇ ಬಾರೊ 

ಜೊತೆಗೆ ಕರೆತರಬೇಡ 

ಕಹಿ ನೆನಪನು 

ಕೆಂಗುಲಾಬಿಯ ಜೊತೆಗೆ 

ಯಾರು ತರುವರು ಹೇಳೋ 

ಮುಳ್ಳುಗಳನು ||


ನೀನೊಬ್ಬನೇ ಬಾರೋ 

ಜೊತೆಗೆ ಕರೆತರಬೇಡ ಕುಲದ ಹೆಸರು 

ನೀನೊಬ್ಬ ಬಾ ಸಾಕು 

ನೀರು ತರುವರು ಜೊತೆಗೆ ಹೊತ್ತು            

ತರುವರೋ ತಳದ ಕೆಸರು ||


ನೀನೊಬ್ಬ ಬಾ ಸಾಕು 

ನನಗೆ ಬೇಕಾಗಿಲ್ಲ ಬೇರೆ ಗೊಡವೆ 

ಹುಟ್ಟುವಾಗಲೇ ಯಾರು ತೊಟ್ಟು ಬಂದರೋ ಹೇಳೋ,ವಸ್ತ್ರ ಒಡವೆ               

ನೀನೊಬ್ಬನೇ ಬಾರೋ! ||


ನೀನೊಬ್ಬ ಬಾ ಸಾಕು 

ನನಗೆ ನೀನೇ  ಬೇಕು ,ಅಷ್ಟು ಸಾಕು 

ನಾವೆಂಬ ನಾವೆಗೆ 

ನಾವೇ ನಾವಿಗರಾಗಿ 

ತೊರೆಯನ್ನು ಹಾಯಬೇಕು ||