ಕ್ರಾಂತಿಯೋಗಿ ಬಸವಣ್ಣ ರಾಜ್ಯದ 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿ ರಾಜ್ಯ ಸಚಿವ ಸಂಪುಟ ಸಭೆಯು ಗುರುವಾರ ತೀರ್ಮಾನ ಕೈಗೊಂಡಿದೆ.
ಮಹಾರಾಷ್ಟ್ರ ಸರ್ಕಾರ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಾಂಸ್ಕೃತಿಕ ನಾಯಕನೆಂದು
ಅಧಿಕೃತ ಮುದ್ರೆಯೊತ್ತಿದೆ. ಅದೇ ರೀತಿಯಲ್ಲಿ ಬಸವೇಶ್ವರರಿಗೆ 'ಕರ್ನಾಟಕ ಸಾಂಸ್ಕೃತಿಕ ನಾಯಕ'ನೆಂದು ಸಾರಿದ ಎರಡನೇ ರಾಜ್ಯವಾಗಿದೆ.
ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಪ್ರಗತಿಯಲ್ಲಿದೆ. ಪೂರ್ವನಿಗದಿ ಪ್ರಕಾರ 2025 ರೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.
ಸರ್ಕಾರ ಬಸವಣ್ಣನನ್ನು 'ಕರ್ನಾಟಕ ಸಾಂಸ್ಕೃತಿಕ ನಾಯಕ' ಎಂದು ಗುರುವಾರ ನಡೆದ ಸಚಿವ ಸಂಪುಟದಲ್ಲಿ ಘೋಷಿಸಿರುವುದು ಬಸವ ಭಕ್ತರಿಗೆ ಹಾಗೂ ಅನುಯಾಯಿಗಳ ಸಂತಸಕ್ಕೆ ಕಾರಣವಾಗಿದೆ. ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ಜನವರಿ 13 ರಂದು ನಡೆದ 37 ನೇ ಶರಣಮೇಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ವಿನಂತಿಸಿದ್ದರು. ಇದಕ್ಕೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಘೋಷಿಸುವ ಭರವಸೆ ಕೊಟ್ಟಿದ್ದರು. ಶರಣ ಮೇಳದ ಕೊನೇ ದಿನ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಬೇಕೆಂಬ ನಿರ್ಣಯ ಕೂಡ ಕೈಗೊಳ್ಳಲಾಗಿತ್ತು.